ದಿ ಡೈಲಿ ನ್ಯೂಸ್ ಬಳ್ಳಾರಿ
ಆಡಳಿತ ಬಿಜೆಪಿ ಸರ್ಕಾರದ ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಜನ ಮನ್ನಣೆ ಪಡೆದಿದ್ದು, ಕಾಂಗ್ರೆಸ್ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಎಷ್ಟೇ ತಿಪ್ಪರಲಾಗ ಹಾಕಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರೋಲ್ಲ, ಡಬಲ್ ಎಂಜಿನ್ ಸರ್ಕಾರದ ಜನಪರ ಯೋಜನೆಗಳೇ ಚುನಾವಣೆಯಲ್ಲಿ ಬಿಜೆಪಿಗೆ ಶ್ರೀರಕ್ಷೆಯಾಗಲಿದೆ ಎಂದು ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇನ್ನೂ ಚುನಾವಣೆಯೇ ನಡೆದಿಲ್ಲ. ಈಗಲೇ ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಟವಲ್ ಹಾಕುತ್ತಿದ್ದಾರೆ. ಅವರಿಬ್ಬರ ಕನಸು ನನಸಾಗೋಲ್ಲ, ಎಷ್ಟೇ ಕಸರತ್ತು ನಡೆಸಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರೋಲ್ಲ, ಕಾಂಗ್ರೆಸ್ ಪ್ರಾರಂಭಿಸಿದ ಪ್ರಜಾ‘್ವನಿ ಯಾತ್ರೆಯ ಬಸ್ ಹಾರ್ನ್ ಕ್ಷೀಣಿಸಿದೆ,. ಬಸ್ ಪಂಚರ್ ಆಗಿ ಎಲ್ಲೋ ಒಂದು ಕಡೆ ನಿಂತಿದೆ ಎಂದು ಲೇವಡಿ ಮಾಡಿದರು. ಕೂಡ್ಲಗಿ ಶಾಸಕ ಎನ್.ವೈ.ಗೋಪಾಲಕೃಷ್ಣ ಅವರ ರಾಜೀನಾಮೆಯಿಂದ ನನಗಷ್ಟೇ ಅಲ್ಲ ಕಾರ್ಯಕರ್ತರು, ಮುಖಂಡರಿಗೆ ನೋವಾಗಿದೆ. ಅವರಿಗೆ ಈ ಹಿಂದೆ ಕಾಂಗ್ರೆಸ್ ಟಿಕೆಟ್ ಕೊಡದಿದ್ದಾಗ, ನಮ್ಮ ಪಕ್ಷಕ್ಕೆ ಕರ್ಕೊಂಡು ಟಿಕೆಟ್ ನೀಡಿ ಕೂಡ್ಲಗಿ ಕ್ಷೇತ್ರದಿಂದ ನಿಲ್ಲಿಸಿ ಗೆದ್ದುಕೊಂಡು ಬಂದೆವು. ಅವರು ಪಕ್ಷ ಬಿಡಲು ಕಾರಣವೇನು ಎಂಬುದು ತಿಳಿದಿಲ್ಲ, ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಸ್ಥಳೀಯರಿಗೆ ಸಾಕಷ್ಟು ನೋವು ತಂದಿದೆ ಎಂದರು.