ಕ್ಷಮಿಸಿ ಬಿಡು ಬಸವಣ್ಣ’ ಹಾಡು ಲೋಕಾರ್ಪಣೆ ವೇಳೆ ಗೊ.ರು.ಚನ್ನಬಸಪ್ಪ ಅಭಿಮತ
ಸಾಹಿತಿ ಮತ್ತು ದಂತವೈದ್ಯರೂ ಆದ ಗಂಗಾವತಿಯ ಡಾ.ಶಿವಕುಮಾರ್ ಮಾಲಿಪಾಟೀಲ್ ರಚಿಸಿರುವ ’ಕ್ಷಮಿಸಿ ಬಿಡು ಬಸವಣ್ಣ’ ಎನ್ನುವ ೫.೩೪ ನಿಮಿಷದ ವಿಡಿಯೋ ಹಾಡನ್ನು ನಾಡೋಜ.ಗೊ.ರು.ಚನ್ನಬಸಪ್ಪ, ನಾದಬ್ರಹ್ಮ ಹಂಸಲೇಖಾ ಇತರೆ ಗಣ್ಯರು ಲೋಕಾರ್ಪಣೆ ಮಾಡಿದರು. ಈ ವೇಳೆ ನಾಡೋಜ ಗೊ.ರು.ಚನ್ನಬಸಪ್ಪ ಮಾತನಾಡಿ, ನಾದಬ್ರಹ್ಮ ಹಂಸಲೇಖ ನಮ್ಮ ನಾಡಿನಲ್ಲೇ ಅಭಿಮಾನ ಪಡುವಂತಹ ಶ್ರೇಷ್ಠ ಸಂಗೀತ ಸಂಯೋಜಕ. ಅವರ ಬಗ್ಗೆ ಒಂದು ಲೇಖನ ಬರೆದಿದ್ದೆ. ಆದರೆ ನೆನಪಿನ ಶಕ್ತಿ ಹೋಗಿದ್ದರಿಂದ ಹೇಳಲು ಆಗುತ್ತಿಲ್ಲ. ಮಾಲಿಪಾಟೀಲರು ಲೋಕಗೀತೆ ರಚನೆ ಮಾಡಿ ಅದಕ್ಕೊಂದು ದೃಶ್ಯರೂಪ ಕೊಟ್ಟಿರುವುದು ತುಂಬ ಅಭಿನಂದನೀಯ. ನಾನು ನೋಡಿ ಸಂತೋಷಪಟ್ಟಿದ್ದೇನೆ. ನೀವು, ನಿಮ್ಮ ಅಕ್ಕಪಕ್ಕದವರಿಗೆ ಹೇಳಿ. ಶ್ರೀನಿವಾಸಮೂರ್ತಿರನ್ನು ಪರದೆ ಮೇಲೆ ಮಾತ್ರ ನೋಡಿದ್ದೆ. ನೇರವಾಗಿ ನೋಡಿರಲಿಲ್ಲ. ಈ ನೆಪದಲ್ಲಿ ಆದರೂ ಹಂಸಲೇಖಾರನ್ನು ನೋಡಲು ಅವಕಾಶವಾಯಿತು. ನನಗೆ ೯೫ ಆಗಿದೆ. ದೇವರ ಅನುಗ್ರಹ ಇದ್ದರೆ ಸೆಂಚೂರಿ ಬಾರಿಸುತ್ತೇನೆಂದು ಆಹ್ವಾನಿತರನ್ನು ನಗಿಸಿದರು. ಹಿರಿಯ ನಟ ಶ್ರೀನಿವಾಸಮೂರ್ತಿ ಮಾತನಾಡಿ, ಕ್ಷಮಿಸಿ ಬಿಡು ಬಸವಣ್ಣ ಅಂತ ಯಾಕೆ ಕೇಳಬೇಕು. ಹನ್ನರಡನೇ ಶತಮಾನದಲ್ಲಿ ಕ್ರಾಂತಿ ಮಾಡಿ ದಾರಿದೀಪ ಹಾಕಿ ಕೊಟ್ಟಿದ್ದಾರೆ. ಅದರಂತೆ ಎಲ್ಲರೂ ಯಾರು ನಡೆಯುತ್ತಿಲ್ಲ. ಅದರಲ್ಲೂ ರಾಜಕೀಯ ವ್ಯಕ್ತಿಗಳು. ಇವತ್ತು ಹೇಳಿದ್ದನ್ನು ನಾಳೆ ಹೇಳೋಲ್ಲ. ನಾಳೆ ಹೇಳಿದ್ದನ್ನು ನಾಡಿದ್ದು ಮರೆತುಬಿಡ್ತಾರೆ. ಇಂಥ ಪ್ರಸಂಗದಲ್ಲಿ ಕ್ಷಮಿಸಿ ಬಿಡು ಅಂತ ಯಾರಿಗೆ ಹೇಳೋದು. ನಾವು ಮಾಡಿದ ತಪ್ಪುಗಳನ್ನು ತಿದ್ದಿಕೊಂಡರೆ ಬೇಕಾದಷ್ಟು ಆಗುತ್ತದೆ. ಆವಾಗ ಬಸವಣ್ಣನವರು ಮೇಲಿಂದ ಕ್ಷಮಿಸುತ್ತಾರೆ. ಇಂಥ ಒಂದು ಸಾಹಿತ್ಯವನ್ನು ನಿರ್ಮಾಪಕರು ಸೊಗಸಾಗಿ ರಚನೆ ಮಾಡಿದ್ದಾರೆ. ಹೆಚ್ಚು ಜಯಪ್ರಿಯವಾಗಲೆಂದು ಶುಭ ಹಾರೈಸಿದರು.