ದಿ ಡೈಲಿ ನ್ಯೂಸ್ ಬೇಲೂರು
ಶಾಂತಿ, ನೆಮ್ಮದಿ, ಸೌಹಾರ್ದತೆಗಾಗಿ ಇಲ್ಲಿ ಸದ್ಭಾವನಾ ಯಾತ್ರೆ ಮಾಡುತ್ತಿರುವುದು ಶೋಚನೀಯ ಸಂಗತಿ ಎಂದು ಕೋಡಿಮಠದ ಶಿವಾನಂದಶಿವಯೋಗಿ ಮಹಾಸ್ವಾಮಿಗಳು ಹೇಳಿದರು.
ಜನಪರ, ಭಾರತೀಯ ಪರಿವರ್ತನಾ ಸಂಘ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಇಲ್ಲಿ ಮಾನವೀಯತೆಗಾಗಿ ಸೌಹಾರ್ದ ನಡಿಗೆ ಕಾರ್ಯಕ್ರಮಕ್ಕೆ ನೆಹರೂನಗರದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಸಮಾಜದಲ್ಲಿ ಎಲ್ಲಾ ಜಾತಿ, ಧರ್ಮ, ಜನಾಂಗದವರು ಶಾಂತಿ, ಸೌಹಾರ್ದತೆ, ಪ್ರೀತಿ, ವಿಶ್ವಾಸದಿಂದ ಬಾಳಬೇಕಿದೆ. ಎಲ್ಲಾ ಧರ್ಮ, ಜಾತಿ, ಪಂಥಗಳಿಗೆ ಸುಖ, ನೆಮ್ಮದಿ ಬೇಕು. ಈ ಹಿನ್ನಲೆಯಲ್ಲಿ ಇಲ್ಲಿ ಸದ್ಭಾವನಾ ಯಾತ್ರೆ ಮಾಡುತ್ತಿರುವುದು ಶೋಚನೀಚಿi, ಆತ್ಮಾವಲೋಕನೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಜಿಪಂ ಮಾಜಿ ಸದಸ್ಯ ವೈ.ಎನ್.ಕೃಷ್ಣೇಗೌಡ ಮಾತನಾಡಿ, ದೇಶದಲ್ಲಿ ಸ್ವಾತಂತ್ರ್ಯ ನಂತರ ಎಲ್ಲಾ ಧರ್ಮದವರೂ ಒಗ್ಗಟ್ಟಿನಿಂದ ಇದ್ದರು. ಇತ್ತೀಚಿನ ಕೆಲವೊಂದು ಬೆಳವಣಿಗೆ ನೋಡಿ ಜನ ಬೇಸತ್ತಿದ್ದಾರೆ, ಇದು ಭವಿಷ್ಯಕ್ಕೆ ಒಳ್ಳೆಯದಲ್ಲ ಎಂದರು.
ಜಿಲ್ಲಾ ರೈತ ಸಂಘದ ಕಾರ್ಯದರ್ಶಿ ಬಳ್ಳೂರುಸ್ವಾಮಿಗೌಡ ಮಾತನಾಡಿ, ಬೇಲೂರಿನಲ್ಲಿ ಇತ್ತೀಚಗೆ ಶಾಂತಿ, ಸುವ್ಯವಸ್ಥೆ ಕದಡುವಂತ ಕೆಲಸಗಳು ಆಗುತ್ತಿದೆ. ಈ ಕಾರಣದಿಂದ ಪ್ರಗತಿಪರರು ಸೇರಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಮಾನವೀಯತೆಯನ್ನು ನಾಶ ಮಾಡುವ ಪ್ರಯತ್ನ ಕೋಮುವಾದಿಗಳಿಂದ ನಡೆಯುತ್ತಿದೆ ಎಂದು ಟೀಕಿಸಿದರು. ಕೆಪಿಸಿಸಿ ಸದಸ್ಯ ಬಿ.ಎಲ್.ಧರ್ಮೇಗೌಡ ಸ್ವಾಮೀಜಿಯನ್ನು ಗೌರವಿಸಿ ಬರಮಾಡಿಕೊಂಡರು.
ಇಸ್ಲಾಂ, ಕ್ರಿಶ್ಚಿಯನ್ ಧರ್ಮಗುರುಗಳು, ಮಾಜಿ ಸಚಿವ ಬಿ.ಶಿವರಾಂ, ಜಿಪಂಮಾಜಿ ಸದಸ್ಯ ಹೆಚ್.ಎಂ.ಮಂಜಪ್ಪ, ಸಯದ್ತೌಫಿಕ್, ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಎಂ.ಆರ್.ವೆಂಕಟೇಶ್, ಕಾಂಗ್ರೆಸ್ ಹಿಂದುಳಿದ ವರ್ಗಗಳ ರಾ.ಪ್ರ.ಕಾರ್ಯದರ್ಶಿ ಇ.ಹೆಚ್.ಲಕ್ಷ್ಮಣ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ವೈ.ಟಿ.ದಾಮೋಧರ್, ಪುರಸಭಾ ಸದಸ್ಯರಾದ ಶಾಂತಕುಮಾರ್, ಜಮಾಲುದ್ದೀನ್, ಅಶೋಕ್, ಮಾಜಿ ಸದಸ್ಯ ಜುಬೇರ್, ಪ್ರಮುಖರಾದ ನಜ್ಮುಲ್ಪಾಷ, ನವೀದ್, ಅಬ್ದುಲ್ಸಮದ್, ಹೆಚ್.ಕೆ.ಮಹೇಶ್ ಇತರರು ಇದ್ದರು.