ದಿ ಡೈಲಿ ನ್ಯೂಸ್ ಮಡಿಕೇರಿ
ಜಿಲ್ಲೆಯ ನಾಲ್ಕು ನಾಡು ಅರಮನೆ ವ್ಯಾಪ್ತಿಯಲ್ಲಿರುವ ಕಾಪಾಳ ಸಮುದಾಯಕ್ಕೆ ನ್ಯಾಯಬೆಲೆ ಅಂಗಡಿಯನ್ನು ತೆರೆದು ಪಡಿತರವನ್ನು ವಿತರಿಸಲು ಕ್ರಮ ಕೈಗೊಳ್ಳುವಂತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ.ಜಯಪಕ್ರಾಶ ಹೆಗ್ಡೆ ಅವರು ಜಿಲ್ಲಾಧಿಕಾರಿ ಅವರಿಗೆ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಗಂಗಾ ಕಲ್ಯಾಣ ಯೋಜನೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ ಹಾಗೂ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಕ್ಕಬ್ಬೆ ಗ್ರಾ.ಪಂ.ವ್ಯಾಪ್ತಿಯ ನಾಲ್ಕು ನಾಡು ಅರಮನೆ ವ್ಯಾಪ್ತಿಯಲ್ಲಿ ಕಾಪಾಳ ಸಮಾಜದವರು ವಾಸಿಸುತ್ತಿದ್ದು, ಇವರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆಯೋಗದ ಅಧ್ಯಕ್ಷರು ಸೂಚನೆ ನೀಡಿದರು.
ಕಾಪಾಳ ಜನಾಂಗದ ಪ್ರಮುಖರಾದ ಪೊನ್ನಪ್ಪ ಮಾತನಾಡಿ ೬೦ ಎಕರೆ ಜಾಗದಲ್ಲಿ ಕಾಪಾಳ ಸಮಾಜದವರು ನೆಲೆಸಿದ್ದು, ತಾತ ಮುತ್ತಾತಂದಿರ ಹೆಸರಿನಲ್ಲಿ ಭೂಮಿ ಇದೆ. ಆದರೆ ಮಕ್ಕಳ ಹೆಸರಿಗೆ ಆರ್ಟಿಸಿ ಆಗಿಲ್ಲ. ಇದನ್ನು ಪರಿಶೀಲಿಸಿ ಆರ್ಟಿಸಿ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ವಂಶಾವಳಿ ಪ್ರಕಾರ ಆರ್ಟಿಸಿಯಲ್ಲಿ ಕುಟುಂಬಸ್ಥರ ಹೆಸರನ್ನು ಸೇರಿಸಿ ಮಾರ್ಪಡಿಸಿ ಕೊಡಲಾಗುವುದು ಎಂದು ಅಧ್ಯಕ್ಷರ ಗಮನಕ್ಕೆ ತಂದರು.