ದಿ ಡೈಲಿ ನ್ಯೂಸ್ ಮಂಡ್ಯ
ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರ ಆಪ್ತರು ಬಿಜೆಪಿಗೆ ಸೇರಲು ಸಜ್ಜಾಗುತ್ತಿದ್ದಾರೆ. ಆ ಮೂಲಕ ಸಂಸದೆ ಸುಮಲತಾ ಅಂಬರೀಶ್ ಕೂಡ ಕೆಲವು ಷರತ್ತಿನೊಂದಿಗೆ ಬಿಜೆಪಿ ಸೇರಲು ತಾಲೀಮು ಆರಂಭಿಸಿದ್ದಾರೆ ಎಂಬ ಮಾತು ಜಿಲ್ಲೆಯಲ್ಲಿ ಕೇಳಿ ಬರುತ್ತಿದೆ. ಮುಂದಿನ ಸಾರ್ವತ್ರಿಕ ಚುನಾವಣೆಯ ವೇಳೆಗೆ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂಬ ಮಾತು ಮಂಡ್ಯ ಜಿಲ್ಲೆಯಾದ್ಯಂತ ಹರಿದಾಡುತ್ತಿದೆ. ಸುಮಲತಾ ಬಹಿರಂಗವಾಗಿ ಬಿಜೆಪಿ ಸೇರುತ್ತೇನೆ ಎಂಬ ವಿಚಾರವನ್ನು ತಿಳಿಸಿಲ್ಲ. ಜಿಲ್ಲೆಯ ಜನರು ತೀರ್ಮಾನಿಸಿದರೆ ಮಾತ್ರ ತಾವು ಬಿಜೆಪಿ ಪಕ್ಷಕ್ಕೆ ಸೇರುವೆ ಎಂಬುದಾಗಿ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದರು .
ಬಿಜೆಪಿ ಸೇರುವ ಬಗ್ಗೆ ಆ ಪಕ್ಷದ ಉನ್ನತ ನಾಯಕರ ಜೊತೆ ಸುಮಲತಾ ಗುಪ್ತ ಮಾತುಕತೆ ನಡೆಸಿದ್ದಾರೆ ಎಂಬ ಊಹಾಪೋಹಗಳು ಜಿಲ್ಲೆಯಲ್ಲಿ ಹರಡಿವೆ. ಸುಮಲತಾ ಬಿಜೆಪಿ ಸೇರಲು ಒಪ್ಪಿದ್ದರೆ ಮಂಡ್ಯ ಜಿಲ್ಲೆಗೆ ಪ್ರಧಾನಿ ಮೋದಿ ೬೦೦ ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸುವುದಾಗಿ ಹೇಳಿದ್ದಾರೆಂದು ಬಿಜೆಪಿ ವರಿಷ್ಠರು ತಿಳಿಸಿದ್ದಾರೆ ಎಂಬ ಮಾತುಗಳು ಕೂಡ ಚರ್ಚೆಯಾಗುತ್ತಿದೆ. ಆದರೆ ಸುಮಲತಾ ಅಂಬರೀಶ್ ಅವರ ಆಪ್ತರು ಮಾತ್ರ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬುದು ಬಹುತೇಕ ಖಚಿತವಾಗಿದೆ. ಹುಟ್ಟುಹಬ್ಬದ ನೆಪದಲ್ಲಿ ಇಂಡುವಾಳು ಸಚ್ಚಿದಾನಂದ ಶ್ರೀರಂಗಪಟ್ಟಣ ಕ್ಷೇತ್ರದ ಇಂಡುವಾಳು ಗ್ರಾಮದಲ್ಲಿ ಭಾನುವಾರ ಭರ್ಜರಿ ಬಾಡೂಟ ಆಯೋಜಿಸಿದ್ದರು. ಹುಟ್ಟುಹಬ್ಬ ಸಮಾರಂಭದಲ್ಲಿ ಸುಮಲತಾ ಕೂಡ ಭಾಗವಹಿಸಿದ್ದರು.