ದಿ ಡೈಲಿ ನ್ಯೂಸ್ ಮಡಿಕೇರಿ
ರಾಜಕೀಯರಹಿತ ಹೋರಾಟದಿಂದ ಮಾತ್ರ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷರಾದ ಕಾಡ್ಯಮಾಡ ಮನು ಸೋಮಯ್ಯ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕ ಮತ್ತು ಪೆರಾಜೆ ಗ್ರಾಮ ಘಟಕದ ಸಂಯುಕ್ತ ಆಶ್ರಯದಲ್ಲಿ ಪೆರಾಜೆಯ ಅನ್ನಪೂರ್ಣೇಶ್ವರಿ ಕಲಾಮಂದಿರ ರೈತ ಸಭೆ ಮತ್ತು ಸದಸ್ಯತ್ವ ಹಾಗೂ ಘಟಕ ಸ್ಥಾಪನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬೆಳೆಗಾರರ ಸಂಘಟಿತ ಹೋರಾಟದಿಂದ ರೈತ ಸಮಸ್ಯೆಗಳಿಗೆ ಉತ್ತರವನ್ನು ನಿರೀಕ್ಷೀಸಬಹುದಾಗಿದೆ. ಸಂಘಕ್ಕೆ ಹೆಚ್ಚು ಹೆಚ್ಚು ಸದಸ್ಯರು ಸೆರ್ಪಡೆಯಾಗಬೇಕು ಸಂಘವು ಬಲವರ್ಧನೆಯಾಗಬೇಕು ಎಂದು ಹೇಳಿದರು.
ದ.ಕ. ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಓಸ್ವಾಲ್ ಪ್ರಕಾಶ್ ಫೆರ್ನಾಂಡಿಸ್ ಮಾತನಾಡಿ, ಈ ಭಾಗದಲ್ಲಿ ಎಲೆ ರೋಗ ಕಾಣಿಸಿಕೊಂಡಿದ್ದರೂ ಇಂದಿನವರೆಗೂ ಔಷಧ ಕಂಡುಕೊಳ್ಳುವಲ್ಲಿ ಸರ್ಕಾರಗಳು ವಿಫಲವಾಗಿದೆ. ಮುಂದಿನ ದಿನಗಳಲ್ಲಿ ದ.ಕ ಜಿಲ್ಲೆ ಮತ್ತು ಕೊಡಗು ಜಿಲ್ಲಾ ಘಟಕಗಳ ಆಶ್ರಯದಲ್ಲಿ ಸಂಘಟಿತ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಹೇಳಿದರು.
ರೈತ ಸಂಘದ ಜಿಲ್ಲಾ ಸಂಚಾಲಕರಾದ ಸುಭಾಶ್ ಸುಬ್ಬಯ್ಯ ಪ್ರತಿಜ್ಞಾವಿಧಿ ಬೋಧಿಸಿದರು. ಅಡಕೆಗೆ ಹಳದಿ ರೋಗದ ಸ್ವಯಂ ಘೋಷಿತ ಅರ್ಜಿ ಬಿಡುಗಡೆಗೊಳಿಸಲಾಯಿತು. ಕರ್ನಾಟಕ ರಾಜ್ಯ ರೈತ ಸಂಘ ಪೆರಾಜೆ ಗ್ರಾಮದ ನೂತನ ಆಡಳಿತ ಮಂಡಳಿಗೆ ಜಿಲ್ಲಾಧ್ಯಕ್ಷರು ಹಸಿರು ಭಾವುಟ ನೀಡುವ ಮೂಲಕ ಅಧಿಕಾರ ಹಸ್ತಾಂತರ ಮಾಡಿದರು.
ಕೊಡಗು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಸುಜೈ ಬೋಪಯ್ಯ, ಕ.ರಾ.ರೈತ ಸಂಘ ಪೆರಾಜೆ ಅಧ್ಯಕ್ಷ ಬಾಲಕೃಷ್ಣ ನಿಡ್ಯಮಲೆ, ಗೌರವಾಧ್ಯಕ್ಷ ಹರಿಶ್ಚಂದ್ರ ಮುಡ್ಕಜೆ, ಉಪಾಧ್ಯಕ್ಷ ಕೆ.ಸಿ. ಉಮೇಶ್ ಕಂಬಳಚೇರಿ, ಕಾರ್ಯದರ್ಶಿ ಪುರುಷೋತ್ತಮ ಬಂಗಾರಕೋಡಿ, ಖಜಾಂಚಿ ಗಂಗಾಧರ ನೆಕ್ಕಿಲ ಉಪಸ್ಥಿತರಿದ್ದರು.