ದಿ ಡೈಲಿ ನ್ಯೂಸ್ ಪಾಂಡವಪುರ
ಸಿದ್ದಗಂಗಾ ಮಠ ಅಭಿವೃದ್ಧಿಪಡಿಸಲು ಡಾ.ಶಿವಕುಮಾರಸ್ವಾಮೀಜಿ ಎಷ್ಟು ಶ್ರಮಿಸಿದ್ದಾರೆ ಎಂಬುದು ಮಠದ ಭಕ್ತನಾಗಿ ನಾನು ತೀರ ಹತ್ತಿರದಿಂದ ಕಂಡಿದ್ದೇನೆ ಎಂದು ಶಾಸಕ ಸಿ.ಎಸ್.ಪುಟ್ಟರಾಜು ತಿಳಿಸಿದರು.
ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕಸಾಪ ವತಿಯಿಂದ ನಡೆದ ಡಾ.ಶಿವಕುಮಾರಸ್ವಾಮೀಜಿಗಳ 115ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿ, ಸರ್ಕಾರ ಮಠದ ಅಭಿವೃದ್ದಿಗೆ ಸಾಕಷ್ಟು ಅನುದಾನ ನೀಡಲು ಮುಂದಾದರೂ, ಪೂಜ್ಯರು ಅದನ್ನು ತಿರಸ್ಕರಿಸಿ ಮಠ ಅಭಿವೃದ್ದಿಪಡಿಸಿದರು. ಶ್ರೀಗಳು ಯಾವುದೇ ಒಂದು ಜಾತಿಗೆ ಸೀಮಿತವಾಗಿರಲಿಲ್ಲ. ತಮ್ಮ ಸೇವಾ ಕಾರ್ಯಗಳ ಮೂಲಕ ವಿಶ್ವದೆಲ್ಲೆಡೆ ತಮ್ಮ ಭಕ್ತರನ್ನು ಹೊಂದುವ ಮೂಲಕ ವಿಶ್ವಗುರುಗಳಾಗಿದ್ದರು ಎಂದು ತಿಳಿಸಿದರು.
ಶ್ರೀರಾಮಯೋಗೀಶ್ವರ ಮಠದ ಶಿವಬಸವಸ್ವಾಮೀಜಿ ಮಾತನಾಡಿ, ಡಾ.ಶಿವಕುಮಾರಸ್ವಾಮೀಜಿಗಳ ಸಣ್ಣ ವಯಸ್ಸಿನಲ್ಲೇ ಬಡವರಿಗೆ, ಶೋಷಿತರಿಗೆ, ಕಷ್ಟದಲ್ಲಿ ಇರುವವರಿಗೆ ನೇರವಾಗಬೇಕು ಎಂಬ ಆಶಯ ಹೊಂದಿದರು. ಸಿದ್ದಗಂಗಾಮಠದ ಪೀಠಾಧ್ಯಕ್ಷರಾಗಿ ಸಿದ್ದಗಂಗಾಮಠವನ್ನು ಯಾರ ಹಂಗು ಇಲ್ಲದೆ ವಿಶ್ವಮಟ್ಟಕ್ಕೆ ಅಭಿವೃದ್ಧಿ ಪಡಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಗುರುಸ್ವಾಮಿ, ಕಸಾಪ ಅಧ್ಯಕ್ಷ ಮೇನಾಗರ ಪ್ರಕಾಶ್, ಪಿ.ಸಿದ್ದಪ್ಪ, ಎನ್.ಮಹದೇವಪ್ಪ, ತಾಳಶಾಸನ ಆನಂದ್, ದ್ಯಾವಪ್ಪ, ಚಂದ್ರಶೇಖರ್, ಸದಾನಂದ, ಎಂ.ಶಿವಕುಮಾರ್, ಪ.ಮ.ನಂಜುಂಡಸ್ವಾಮಿ ಇದ್ದರು.