ಬಳ್ಳಾರಿ: ದೇಶದಲ್ಲಿ ಉನ್ನತ ಶಿಕ್ಷಣ ಮಟ್ಟ ಕಡಿಮೆಯಿರುವ ಆತಂಕದ ನಡುವೆಯೇ ರಾಜ್ಯ ಸರ್ಕಾರ ಪದವಿ ಶಿಕ್ಷಣ ಸೇರಲು ಸಹ ಪ್ರವೇಶ ಪರೀಕ್ಷೆ ಬರೆಯಬೇಕೆಂಬ ಕಾನೂನು ಮಾಡಲು ಹೊರಟಿರುವುದು ತೀರಾ ಅರ್ಥಹೀನ ಎಂದು ವಕೀಲ ವೆಂಕಟೇಶ್ ಹೆಗಡೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಯುಪಿಎ ಸರ್ಕಾರವಿದ್ದಾಗ ಉನ್ನತ ಶಿಕ್ಷಣ ಸಚಿವರಾಗಿದ್ದ ಕಪಿಲ್ ಸಿಬಲ್ ಅವರು ದೇಶದಲ್ಲಿನ ಉನ್ನತ ಶಿಕ್ಷಣ ಮಟ್ಟ ಹೆಚ್ಚಿಸಲು ಹಲವು ಕ್ರಮ ವಹಿಸಿದ್ದರು. ಪಿಯುಸಿ ನಂತರ ಹೆಚ್ಚಿನ ವಿದ್ಯಾರ್ಥಿಗಳು ಪದವಿ ಕಡೆ ಹೋಗಬೇಕು. ದೇಶವು ಉನ್ನತ ಶಿಕ್ಷಣ ಪಡೆಯುವಲ್ಲಿ ಪ್ರಪಂಚದ ಮಟ್ಟಕ್ಕೆ ನಿಲ್ಲಬೇಕೆಂಬ ಗುರಿ ಇಟ್ಟುಕೊಂಡು ಹಲವು ಕ್ರಮ ವಹಿಸಿದ್ದರು. ವಿದೇಶಕ್ಕೆ ಓದಲು ಹೋಗುವ ಬಡವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲು ಸರ್ಕಾರದಿಂದ ಕ್ರಮವಹಿಸಿದ್ದರು. ಆದರೆ, ಇದೆಲ್ಲಾ ಈಗ ಉಲ್ಟಾ ಆಗುತ್ತಿದೆ. ಸರ್ಕಾರ ಇಂತಹ ಕೆಲಸಕ್ಕೆ ಕೈಹಾಕದೆ, ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ಪದವಿ, ಸ್ನಾತಕೋತ್ತರ ಪದವಿ ಶಿಕ್ಷಣ ಪಡೆಯಲು ಅನುಕೂಲವಾಗುವ ವಾತಾವರಣ ಸೃಷ್ಟಿಸಬೇಕು ಎಂದು ಆಗ್ರಹಿಸಿದ್ದಾರೆ.