ದಿ ಡೈಲಿ ನ್ಯೂಸ್ ಹೊಸಕೋಟೆ
ದೇವರು ಎಂಬ ಅಗೋಚರವಾದ ಶಕ್ತಿಯನ್ನು ಒಲಿಸಿಕೊಳ್ಳಲು ಮನುಷ್ಯ ಅನಾದಿಕಾಲದಿಂದಲೂ ಶ್ರಮಪಟ್ಟಿದ್ದು, ಈ ಕಾರ್ಯದಲ್ಲಿ ಸಾಕಷ್ಟು ಮಂದಿ ದೇವರ ನೆಲೆ ಮತ್ತು ಶಕ್ತಿಯನ್ನು ಕಂಡುಕೊಂಡಿದ್ದಾರೆ ಎಂದು ನಂದಗುಡಿ ಕ್ಷೇತ್ರದ ಜಿಪಂ ಮಾಜಿ ಸದಸ್ಯ ಸಿ. ನಾಗರಾಜ್ ಹೇಳಿದರು.
ತಾಲೂಕಿನ ನಂದಗುಡಿಯ ಶ್ರೀಮುನೇಶ್ವರಸ್ವಾಮಿ ಸನ್ನಿದಾನದಲ್ಲಿ ಶನಿವಾರ ನಡೆದ ಬೀರೆ ದೇವರ ಕುಲಸ್ಥರ ಮಕ್ಕಳಿಗೆ ಮುಡಿ ಕೊಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿಂದೂ ಧರ್ಮದಲ್ಲಿ ದೇವರ ಆರಾಧನೆಗೆ ವಿಶಿಷ್ಟ ಪರಂಪರೆಯಿದ್ದು, ದೇವರ ಕಾರ್ಯಗಳಲ್ಲಿ ಎಲ್ಲರೂ ಬೆರೆಯುವುದರಿಂದ ಪರಸ್ಪರ ಪ್ರೀತಿ, ವಿಶ್ವಾಸ, ಅನ್ಯೊನತೆ ಮೂಡಲು ಸಹಕಾರಿಯಾಗುತ್ತದೆ. ನಮ್ಮ ಹಿರಿಯರ ಹಾಕಿಕೊಟ್ಟ ಹಾದಿಯಲ್ಲಿ ಪೂಜಾ ಕಾರ್ಯಗಳನ್ನು ನಡೆಸುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗುತ್ತದೆ ಎಂದರು.
ಬೀರೆದೇವರ ಸೇವಂತಿಗೆ ಭಂಡಾರ ಕುಲಸ್ಥರ ಸಮಿತಿ ಅಧ್ಯಕ್ಷ ರಾಮಣ್ಣ ಮಾತನಾಡಿ, ಪ್ರತಿ ಮೂರು ವರ್ಷಕ್ಕೆ ಒಮ್ಮೆ ಇಲ್ಲಿ ಕಾರ್ಯ ನಡೆಯುತ್ತದೆ. ಸುಮಾರು ೪೦೦ ವರ್ಷಗಳಿಂದಲೂ ನಮ್ಮ ಪೂರ್ವಿಕರು ನಡೆಸಿಕೊಂಡು ಬಂದ ಪದ್ಧತಿಯಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದಲೂ ಕುಲಭಾಂದವರೂ ಇಲ್ಲಿಯೇ ಮಕ್ಕಳಿಗೆ ಪೂಜೆ ಸಲ್ಲಿಸಿ ಮುಡಿ ನೀಡುತ್ತಾರೆ ಎಂದರು.
ಪ್ರಧಾನ ಅರ್ಚಕ ಬೀರಪ್ಪ, ಬೀರೆದೇವರ ಸೇವಂತಿಗೆ ಭಂಡಾರ ಕುಲಸ್ಥರ ಸಮಿತಿ ಸದಸ್ಯರಾದ ಅತ್ತಿಬೆಲೆ ಬೀರಪ್ಪ, ರಾಮಣ್ಣ, ಸೂಲಿಬೆಲೆ ಶಂಕರಪ್ಪ, ಮರವೇ ಕೃಷ್ಣಪ್ಪ, ಕಲ್ಕರೆ ಬೀರಪ್ಪ, ಮುನಿರಾಜಪ್ಪ, ರಾಮೇಗೌಡ ಇತರರಿದ್ದರು.