ದಿ ಡೈಲಿನ್ಯೂಸ್ ನಾಲತವಾಡ
ನಾಲತವಾಡ ವ್ಯಾಪ್ತಿಯ ಗ್ರಾಮೀಣ ಭಾಗದ ಹಿಂದುಳಿದ ಬಡ ರೈತರು ತಮ್ಮ ಜಮೀನುಗಳಲ್ಲಿ ಹನಿ ನೀರು ಕಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಜಮೀನು ಹೊಂದಿದ ಎಸ್ಸಿ-ಎಸ್ಟಿ ರೈತರಿಗೆ ನೀರು ಒದಗಿಸಲೇಬೇಕು ಎಂಬ ಛಲ ಹೊಂದಿದ್ದ ನನಗೆ ಜನರ ಬೇಡಿಕೆಯು ಈಗ ಈಡೇರಿರುವುದು ಸಂತಸ ಮೂಡಿಸಿದೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ನಿಗಮ ಅಧ್ಯಕ್ಷ ಹಾಗೂ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಆರೇಶಂಕರ ಗ್ರಾಮದ ಸುಮಾರು ೨೪ಕ್ಕೂ ಹೆಚ್ಚು ಎಸ್ಸಿ-ಎಸ್ಟಿ ರೈತರ ಜಮೀನುಗಳಲ್ಲಿ ಎಸ್ಸಿಪಿ-ಟಿಎಸ್ಪಿ ಅಡಿ ಕೊರೆಯಲಾದ ಕೊಳವೆಬಾವಿಗಳನ್ನು ಉದ್ಘಾಟಿಸಿ ಅವರು ಮಾತನಾಡಿ, ಇಲ್ಲಿನ ಮುಗ್ಧ ರೈತರಿಗೆ ಈವರೆಗೂ ಸರ್ಕಾರಿ ಸೌಲಭ್ಯಗಳ ಅರಿವಿರಲಿಲ್ಲ. ಜೊತೆಗೆ ಆರ್ಥಿಕ ಬಲವೂ ಇರಲಿಲ್ಲ. ಇದು ಓರ್ವ ಜನಪ್ರತಿನಿಧಿಯ ಕರ್ತವ್ಯವಾಗಿದ್ದರಿಂದ ಆ ನಿಟ್ಟಿನಲ್ಲಿ ನಾನು ಅಧಿಕಾರಿಗಳೊಂದಿಗೆ ಚರ್ಚಿಸಿ ಎಸ್ಸಿಪಿ-ಟಿಎಸ್ಪಿ ಅಡಿ ಸುಮಾರು ೫ ಕೋಟಿ ವೆಚ್ಚದಲ್ಲಿ ಉಚಿತ ಕೊಳವೆ ಬಾವಿಗಳನ್ನು ಕೊರೆಸಿ ರೈತರ ಋಣ ತೀರಿಸಿದ್ದೇನೆ ಎಂದರು.
ಎಂ.ಎಸ್ ಪಾಟೀಲ, ಮುತ್ತು ಅಂಗಡಿ, ಪವಾಡ ಬಸ್ಸು ದೇಶಮುಖ, ಬಸವರಾಜ ಗುಳಬಾಳ, ಭೀಮಣ್ಣ ಗುರಿಕಾರ, ಅಧಿಕಾರಿಗಳಾದ ಶ್ರೀಶೈಲ ದೊಡಮನಿ, ಬಿ.ಎಚ್.ಬಾರಕೇರ, ಗುತ್ತಿಗೆದಾರ ಬಿ.ಎಂ.ದೇಸಾಯಿ, ಗ್ರಾ.ಪಂ ಸದಸ್ಯರಾದ ಬಸಪ್ಪ ಕರಡಿ ವೀರೇಶ ಕಾಜಗಾರ, ಪಿ.ಎ.ಬೋವೇರ ಮತ್ತಿತರರಿದ್ದರು.