ದಿ ಡೈಲಿ ನ್ಯೂಸ್ ಹೊಸಕೋಟೆ
ಕೆಸಿ ವ್ಯಾಲಿ ನೀರು ಕೆಲವೇ ದಿನಗಳಲ್ಲಿ ಹುಲ್ಲೂರು ಗ್ರಾಮದ ದೊಡ್ಡ ಅಮಾನಿಕೆರೆಗೆ ಹರಿಯಲಿದೆ. ಎಂದು ಸಂಸದ ಬಿ.ಎನ್.ಬಚ್ಚೇಗೌಡ ತಿಳಿಸಿದರು.
ತಾಲೂಕಿನ ದೊಡ್ಡಹುಲ್ಲೂರು ಗ್ರಾಮದಲ್ಲಿ ೪೦ ಲಕ್ಷ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಕೋರಮಂಗಲ-ಚಲಘಟ್ಟದಿಂದ ಕೋಲಾರಕ್ಕೆ ಹರಿಸುವ ಯೋಜನೆಯಲ್ಲಿ ಹೊಸಕೋಟೆ ಭಾಗದ ಕೆರೆಗಳಿಗೂ ತುಂಬಿಸುವ ಸಲುವಾಗಿ ಅಂದಿನ ಸಿಎಂ ಸಿದ್ದರಾಮಯ್ಯ ಹಾಗೂ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಅವರ ಬಳಿ ಮನವಿ ಮಾಡಿದ ಪರಿಣಾಮವಾಗಿ ಇಂದು ತಾಲೂಕಿನ ತಾವರೆಕೆರೆ, ಮುಗಬಾಳ, ಯಳಚಹಳ್ಳಿ, ಅಟ್ಟೂರ ಕೆರೆಗಳು ತುಂಬುವಂತಾಗಿದೆ. ಇನ್ನು ಕೆಲವೇ ದಿನದಲ್ಲಿ ದೊಡ್ಡಹುಲ್ಲೂರು ಕೆರೆಗೂ ಹರಿಸಲಾಗುವುದು. ಇದರಿಂದ ಅಂತರ್ಜಲ ಮಟ್ಟ ವೃದ್ದಿಯಾಗಿ, ನೀರಿನ ಬವಣೆ ತಪ್ಪುತ್ತದೆ ಎಂದರು.
ಹೊಸಕೋಟೆಯಿಂದ ಚಿಂತಾಮಣಿ-ಕಡಪ, ಹಾಗೂ ಮಾಲೂರು, ಬಂಗಾರಪೇಟೆ, ಕೆಜಿಎಫ್, ಕುಪ್ಪಂ, ವೆಲ್ಲೂರು ಮೂಲಕ ಕೃಷ್ಣಗಿರಿ ಸಂಪರ್ಕ ಕಲ್ಪಿಸುವ ನಾಲ್ಕು ಪಥದ ರಸ್ತೆಯನ್ನು ಅಷ್ಟ ಪಥದ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸುವಂತೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಶಾಸಕ ಶರತ್ ಬಚ್ಚೇಗೌಡ, ಬಮೂಲ್ ನಿರ್ದೇಶಕ ಹುಲ್ಲೂರು ಸಿ.ಮಂಜುನಾಥ್, ಟಿಎಪಿಸಿಎಂಎಸ್ ಅಧ್ಯಕ್ಷ ಎಲ್ಎನ್ಟಿ ಮಂಜುನಾಥ್, ಮುಖಂಡರಾದ ರಾಜ್ಗೋಪಾಲ್, ರವೀಂದ್ರನಾಥ್, ಗುತ್ತಿಗೆದಾರ ದೇವರಾಜಪ್ಪ, ಸೊಣ್ಣೇಗೌಡ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.